ಇವೆ ನೋಡಿ ಸಕ್ಕರೆ ಕಾಯಿಲೆಯ ಲಕ್ಷಣಗಳು ನಿರ್ಲಕ್ಷ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

0 214

ಹಿಂದೊಮ್ಮೆ ಪರಂಗಿಯವರ ಕಾಯಿಲೆ ಎಂದೇ ಕನ್ನಡಿಗರಿಗೆ ಪರಿಚಿತವಾಗಿದ್ದ ಮಧುಮೇಹ ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಮಧುಮೇಹದ ಆರಂಭಿಕ ಲಕ್ಷಣಗಳು ಹೆಚ್ಚಿನ ಜನರಿಗೆ ಗೊತ್ತಾಗಿ ಬಿಡುತ್ತವೆ ಎಂದು ನೀವು ಭಾವಿಸಬಹುದು. ದುರದೃಷ್ಟವಶಾತ್, ಮಧುಮೇಹವು ಇನ್ನೂ ಆರಂಭದಲ್ಲಿರುವಾಗ ನೀಡುವ ಸೂಚನೆಗಳು ಸ್ಪಷ್ಟವಾಗಿದ್ದರೂ ಇದನ್ನು ಬೇರೆ ತೊಂದರೆ ಎಂದೇ ತಿಳಿದುಕೊಂಡು ಅಲಕ್ಷಿಸಿದ ಬಳಿಕ ಮಧುಮೇಹದ ಯಾವುದೋ ಒಂದು ಪರಿಣಾಮ ಕಂಡುಬಂದ ಬಳಿಕವೇ ಮಧುಮೇಹ ಆವರಿಸಿರುವುದು ಗೊತ್ತಾಗುತ್ತದೆ. ಅಲ್ಲಿಯವರೆಗೆ ಮಧುಮೇಹ ಪ್ರಾರಂಭಿಕ ಹಂತದಲ್ಲಿದ್ದುದೇ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಏಕೆಂದರೆ ಅದರ ಆರಂಭಿಕ ಲಕ್ಷಣಗಳು ಕೆಲವು ತುಂಬಾ ಸೂಕ್ಷ್ಮವಾಗಿರುತ್ತವೆ ಅಥವಾ ಹೆಚ್ಚಿನವರು ಇವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

​ಟೈಪ್ 1 ಮತ್ತು ಟೈಪ್ 2

ಮಧುಮೇಹ ಎಂಬುದು ಸಂಸ್ಕೃತದ ಮಧು ಅಂದರೆ ಸಿಹಿ ಮೇಹನ ಎಂದರೆ ಮೂತ್ರ, ಈ ಎರಡು ಪದಗಳ ಮೂಲಕ ಬಂದಿದೆ. ಮೇಹನವನ್ನು ಹೃಸ್ವವಾಗಿಸಿ ಮಧುಮೇಹ ಎಂದೇ ಕರೆಯಲಾಗುತ್ತದೆ. ನಮ್ಮ ಮೇದೋಜೀರಕ ಗ್ರಂಥಿ ಅಗತ್ಯವಿದ್ದಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸದೇ ಹೋದಾಗ ರಕ್ತದಲ್ಲಿ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ಹೊರ ಹೋಗುತ್ತದೆ. ಇದಕ್ಕೆ ಟೈಪ್ 1 ಮಧುಮೇಹ ಎನ್ನುತ್ತಾರೆ. ಒಂದು ವೇಳೆ ಮೇದೋಜೀರಕ ಗ್ರಂಥಿ ಇನ್ಸುಲಿನ್ ಅನ್ನು ಉತ್ಪಾದಿಸಿದ್ದರೂ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದೇ ಹೋದಾಗಲೂ ರಕ್ತದಲ್ಲಿರುವ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತದೆ. ಇದನ್ನು ಟೈಪ್ 2 ಮಧುಮೇಹ ಎನ್ನುತ್ತಾರೆ.

ಇವೆರಡೂ ಒಮ್ಮೆ ಬಂದ ಬಳಿಕ ಶಾಶ್ವತವಾಗಿ ಉಳಿಯುತ್ತವೆ. ಆದರೆ ಸೂಕ್ತ ಕ್ರಮಗಳಿಂದ ಇವುಗಳನ್ನು ನಿಯಂತ್ರಣದಲ್ಲಿರಿಸಿ ಉತ್ತಮ ಜೀವನವನ್ನು ಮುಂದುವರೆಸಬಹುದು. ಇದರ ಹೊರತಾಗಿ ಗರ್ಭಾವಸ್ಥೆಯಲ್ಲಿ ತಾತ್ಕಾಲಿಕವಾಗಿ ಎದುರಾಗುವ ಮಧುಮೇಹವನ್ನು gestational diabetes ಎಂದು ಕರೆಯುತ್ತಾರೆ. ಹೆರಿಗೆಯ ಬಳಿಕ ಬಾಣಂತನದ ಅವಧಿಯಲ್ಲಿ ಇದು ತನ್ನಿಂತಾನೇ ಗುಣಹೊಂದುತ್ತದೆ. ಇದರ ಹೊರತಾಗಿ ಅತ್ಯಪರೂಪದಲ್ಲಿ ಕಾಣಬರುವ ಮೊನೊಜೆನಿಕ್ ಮಧುಮೇಹ (monogenic diabetes) ಎಂಬ ಸ್ಥಿತಿಯಲ್ಲಿ ಒಂದೇ ವಂಶವಾಹಿನಿಯ ರೂಪಾಂತರಗಳಿಂದ (ಬದಲಾವಣೆಗಳಿಂದ) ಎದುರಾಗುತ್ತದೆ.

​ಮಧುಮೇಹದ ಚಿಹ್ನೆಗಳನ್ನು ನಾವೇಕೆ ಅಲಕ್ಷಿಸುತ್ತೇವೆ?

2014 ರಲ್ಲಿ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತವು ಮಧುಮೇಹಕ್ಕೆ ಸಂಬಂಧಿಸಿದ ರೋಗದ ಹೊರೆಯ ಒಂದು ದೊಡ್ಡ ಭಾಗವನ್ನು 2013 ರಲ್ಲಿ ಮಾಡಿದ ಅಂದಾಜಿನ ಪ್ರಕಾರ 6.51 ಕೋಟಿ ವಯಸ್ಕರೊಂದಿಗೆ ಹೊಂದಿದೆ. ಹೆಚ್ಚಿನ ಜನರು ಆರಂಭಿಕ ರೋಗಲಕ್ಷಣಗಳನ್ನು ಕಡೆಗಣಿಸುತ್ತಾರೆ ಎಂದು ಈ ಅಧ್ಯಯನವು ವಿವರಿಸುತ್ತದೆ. ವಾಸ್ತವದಲ್ಲಿ ಮಧುಮೇಹ ದೀರ್ಘಕಾಲದ ಕಾಯಿಲೆಯಾಗಿದೆ ಮತ್ತು ಅದರ ಪರಿಣಾಮಗಳು ತಕ್ಷಣವೇ ಸ್ಪಷ್ಟವಾಗಿ ಪ್ರಕಟಗೊಳ್ಳುವುದಿಲ್ಲ. ಅಲ್ಲದೇ ಈ ಲಕ್ಷಣಗಳು ಇತರ ಸಾಮಾನ್ಯ ಕಾಯಿಲೆಗಳ ಲಕ್ಷಣಗಳಂತೆಯೇ ಇರುವ ಕಾರಣದಿಂದಲೂ ಇವುಗಳನ್ನು ಹೆಚ್ಚಿನವರು ಅಲಕ್ಷಿಸುತ್ತಾರೆ.

​ರೋಗ ಉಲ್ಬಣಗೊಳ್ಳುವುದು

ವಾಸ್ತವದಲ್ಲಿ, ಮಧುಮೇಹ ಎದುರಾದ ಬಳಿಕ ಸೂಕ್ತ ನಿಯಂತ್ರಣವಿಲ್ಲದಿದ್ದರೆ ಭಾರೀ ಹಾನಿಯನ್ನುಂಟುಮಾಡುತ್ತದೆ, ಕೆಲವೊಮ್ಮೆ ತೀವ್ರವಾಗಿರುತ್ತದೆ, ವರ್ಷಗಳ ಮೊದಲೇ ರೋಗಲಕ್ಷಣಗಳು ವಾಸ್ತವವಾಗಿ ಗಮನಕ್ಕೆ ಬಂದಾಗಲೂ ಇದಕ್ಕೆ ಸೂಕ್ತ ಚಿಕಿತ್ಸೆ ದೊರಕದೇ ಉಲ್ಬಣಿಸುತ್ತಾ ಹೋಗುತ್ತದೆ. ಇದು ದುರದೃಷ್ಟಕರ! ಏಕೆಂದರೆ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯು ರೋಗ ಉಲ್ಬಣಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ತೊಂದರೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ, ಉದಾಹರಣೆಗೆ ಹೃದ್ರೋಗ, ಪಾರ್ಶ್ವವಾಯು, ಮೂತ್ರಪಿಂಡ ಕಾಯಿಲೆ, ನರ ಹಾನಿ ಇತ್ಯಾದಿ.

​ತಜ್ಞರ ಸಲಹೆ ಪಡೆಯುವುದು ಮುಖ್ಯ

ಆದ್ದರಿಂದ, ಈಗ ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದು ಅನ್ನಿಸಿದ್ದು ಈಗಾಗಲೇ ನಿಮಗೆ ಮಧುಮೇಹ ಪ್ರಾರಂಭವಾಗಿರುವ ಲಕ್ಷಣಗಳು ತೋರತೊಡಗಿದರೆ ಇದನ್ನು ತಕ್ಷಣವೇ ಗುರುತಿಸಿ ತಜ್ಞರ ಸಲಹೆ ಪಡೆಯುವ ಮೂಲಕ ಮಧುಮೇಹ ಪೂರ್ಣವಾಗಿ ಆವರಿಸುವುದನ್ನು ಆದಷ್ಟೂ ಮಟ್ಟಿಗೆ ತಡವಾಗಿಸಬಹುದು ಅಥವಾ ಇದರ ಪ್ರಾಬಲ್ಯವನ್ನು ಕ್ಷೀಣಿಸಬಹುದು. ಈ ಬಗೆಯ ಹತ್ತು ಲಕ್ಷಣಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ಯಾವುದೊಂದಾದರೂ ಅಥವಾ ಒಂದಕ್ಕೂ ಹೆಚ್ಚಿನ ಲಕ್ಷಣಗಳು ನಿಮ್ಮ ಆರೋಗ್ಯದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದ್ದರೆ ತಕ್ಷಣ ವೈದ್ಯರನ್ನು ಕಾಣುವುದು ಅನಿವಾರ್ಯ.

ಈ ಕೆಳಗಿನ ಆರಂಭಿಕ ಚಿಹ್ನೆಗಳು ಮತ್ತು ಮಧುಮೇಹದ ಲಕ್ಷಣಗಳನ್ನು ನೀವು ಗಮನಿಸಬೇಕು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆಗಾಗ್ಗೆ ಮೂತ್ರ ವಿಸರ್ಜನೆಗೆ ಅವಸರವಾಗುವುದು

ಶೌಚಾಲಯಕ್ಕೆ ಆಗಾಗ್ಗೆ ಭೇಟಿ ನೀಡುವುದು ಸಾಮಾನ್ಯವಾಗಿದ್ದರೆ ಅಥವಾ ವಿಶೇಷವಾಗಿ ರಾತ್ರಿಯ ಸಮಯದಲ್ಲಿ ನಿದ್ದೆಯಿಂದ ಕೆಲವಾರು ಬಾರಿ ಏಳುವಂತಹ ಒತ್ತಡ ಎದುರಾಗುತ್ತಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸಾಮಾನ್ಯವಲ್ಲ ಎಂಬ ಸೂಚಿಸುವ ಪ್ರಮುಖ ಸೂಚನೆಗಳಲ್ಲಿ ಒಂದಾಗಿದೆ.

ಆಗಾಗ್ಗೆ ಆಯಾಸವಾಗುವುದು

ಒಂದು ವೇಳೆ ಹೆಚ್ಚಿನ ದೈಹಿಕ ಚಟುವಟಿಕೆಯ ಹೊರತಾಗಿಯೂ ಆಯಾಸ ಕಾಣಿಸಿಕೊಂಡರೆ ಇದು ನಿರ್ಜಲೀಕರಣ ಮತ್ತು ಮೂತ್ರಪಿಂಡದ ಹಾನಿಯಂತಹ ಮಧುಮೇಹದ ಮೂಲ ಪರಿಣಾಮಗಳಿಗೆ ಸಂಬಂಧಿಸಿದ ಲಕ್ಷಣವಾಗಿದೆ.

​ವಿವರಿಸಲು ಸಾಧ್ಯವಾಗದ ತೂಕದಲ್ಲಿ ಇಳಿಕೆ

ನಿಮ್ಮ ದೇಹವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಸರಿಯಾಗಿ ಪ್ರಕ್ರಿಯೆಗೊಳಿಸಲು ಸಾಧ್ಯವಾಗದಿದ್ದಾಗ, ಅದು ಕೊಬ್ಬಿನ ಸಂಗ್ರಹಗಳನ್ನು ಬಳಸಿಕೊಳ್ಳುತ್ತದೆ ಮತ್ತು ನಿಮ್ಮ ಪ್ರಯತ್ನವಿಲ್ಲದೆಯೇ ತೂಕ ಇಳಿಕೆಗೆ ಕಾರಣವಾಗುತ್ತದೆ.

ಸತತವಾಗಿ ಸೋಂಕು ಕಾಣಿಸಿಕೊಳ್ಳುವುದು

ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿದ್ದರೆ ಮೂತ್ರಪಿಂಡಗಳಿಗೆ ಹಾನಿ ಎದುರಾಗುವ ಸಾಧ್ಯತೆಯೂ ಹೆಚ್ಚು. ಪರಿಣಾಮವಾಗಿ ಮೂತ್ರ ಪಿಂಡ ಮತ್ತು ಮೂತ್ರನಾಳಗಳಲ್ಲಿ ಸೋಂಕು ಉಂಟಾಗುತ್ತದೆ. ವಿಶೇಷವಾಗಿ ಶಿಲೀಂಧ್ರದ ಸೋಂಕು ಹೆಚ್ಚಾಗಿ ಮತ್ತು ಸತತವಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಕಾಣಿಸಿಕೊಳ್ಳಬಹುದು.

​ದೃಷ್ಟಿ ದೋಶಗಳು

ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೆ ಇದು ಕಣ್ಣಿನ ದೃಷ್ಟಿಯ ಮೇಲೆ ನೇರವಾದ ಪರಿಣಾಮ ಉಂಟು ಮಾಡುತ್ತದೆ ಹಾಗೂ ಆಗಾಗ ಕನ್ನಡಕಗಳನ್ನು ಬದಲಿಸುತ್ತಾ ಇರಲು ಕಾರಣವಾಗಬಹುದು.

ತ್ವಚೆಯ ಬಣ್ಣದಲ್ಲಿ ಬದಲಾವಣೆ

ಕುತ್ತಿಗೆ, ಕಂಕುಳು, ಕೆಳಕಿಬ್ಬೊಟ್ಟೆ, ಮೊದಲಾದ ಭಾಗಗಳ ಚರ್ಮದಲ್ಲಿ ದಪ್ಪ ಮತ್ತು ಗಾಢವಾದ ಕಲೆಗಳು ಕಾಣಿಸಿಕೊಳ್ಳುವುದು ದೇಹ ಇನ್ಸುಲಿನ್ ಸಹಿಷ್ಣುತೆಯ ತೊಂದರೆಗಳನ್ನು ತೋರ್ಪಡಿಸುತ್ತವೆ.

​ಗಾಯವಾದರೆ ಮಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು

ಹಿಂದೆ ಗಾಯವಾದಾಗ ಕೆಲವು ನಿಮಿಷಗಳಲ್ಲಿಯೇ ರಕ್ತ ಹೆಪ್ಪುಗಟ್ಟಿ ಶೀಘ್ರವೇ ಮಾಗುತ್ತಿದ್ದುದು ಈಗ ಈ ಕ್ರಿಯೆಗೆ ಹೆಚ್ಚು ಸಮಯ ತೆಗೆದುಕ್ಕೊಳ್ಳುತ್ತಿದ್ದರೆ ಇದು ಮಧುಮೇಹದ ಸೂಚನೆಯ ಜೊತೆಗೇ ಮಾಗದ ಗಾಯದಿಂದಾಗಿ ಸೋಂಕು ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಸಾಮಾನ್ಯವಾಗಿ ಆಗುವ ಚಿಕ್ಕ ಪುಟ್ಟ ಗಾಯಗಳು ಅಥವಾ ತರಚುಗಾಯಗಳೂ ಗುಣಹೊಂದಲು ಹೆಚ್ಚು ಸಮಯವನ್ನು ಬಳಸಿಕೊಳ್ಳುತ್ತದೆ.

​ಕಡಿಮೆಯಾಗುವ ಕಾಮಾಸಕ್ತಿ

ಉಳಿದ ಕಾರಣಗಳಂತೆಯೇ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಏರಿಳಿತ ಕಾಣಿಸಿಕೊಂಡಾಗ ಲೈಂಗಿಕ ಆಸಕ್ತಿಯೂ ಕಡಿಮೆಯಾಗುತ್ತದೆ.

ಹೆಚ್ಚಿದ ಹಸಿವು

ನಿಮ್ಮ ದೇಹವು ಸಾಮಾನ್ಯವಾಗಿ ಮಾಡುವಂತೆ ರಕ್ತದಲ್ಲಿನ ಸಕ್ಕರೆಯಿಂದ ಶಕ್ತಿಯನ್ನು ಸೃಷ್ಟಿಸುತ್ತಿಲ್ಲವಾದ್ದರಿಂದ, ಶಕ್ತಿಗಾಗಿ ದೇಹ ಬೇಡಿಕೆ ನೀಡುತ್ತದೆ. ಇದು ಆಹಾರ ಸೇವನೆಯ ಪ್ರಮಾಣ ಹೆಚ್ಚಿಸುವಂತೆ ಜೀರ್ಣಾಂಗಗಳಿಗೆ ಸೂಚನೆ ನೀಡುತ್ತವೆ.

ಚಡಪಡಿಕೆ

ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಏರಿಳಿತದಿಂದಲೂ ಇದು ಭಾವನಾತ್ಮಕವಾಗಿಯೂ ಪರಿಣಾಮ ಬೀರಬಹುದು. ಪರಿಣಾಮವಾಗಿ ಚಡಪಡಿಕೆ, ಕಿರಿಕಿರಿ, ಎಲ್ಲರ ಮೇಲೆ ಹರಿಹಾಯುವುದು ಮೊದಲಾದ ಲಕ್ಷಣಗಳು ಕಾಣಬರಬಹುದು.

Leave A Reply

Your email address will not be published.