ಶಿವರಾತ್ರಿ ವಿಶೇಷ/ಶಿವನಿಗೆ ಅರ್ಪಿಸುವ ಬಿಲ್ವ ಪತ್ರೆ 3 ದಳಗಳ ವಿಶೇಷತೆ ಏನು?

0 376

ಆಧ್ಯಾತ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದ ಬಿಲ್ವಪತ್ರೆ ಎಲೆ ಹಾಗೂ ಮರವನ್ನು ಅನಗತ್ಯ ಸಂಗತಿಗಳಿಗೆ ಬಳಸುವಂತಿಲ್ಲ. ಅದರ ಎಲೆ ಔಷಧಿ ಹಾಗೂ ಶಿವನ ಪೂಜೆಗೆ ಮಾತ್ರ ಮೀಸಲಾಗಿವೆ.

ಸರಳ ಹಾಗೂ ಶಕ್ತಿಯುತವಾದ ದೇವನೆಂದರೆ ಶಿವ. ಲಯ ಕರ್ತನಾದ ಶಿವನಿಗೆ ಪೂಜೆ ಸಲ್ಲಿಸುವುದು ಅತ್ಯಂತ ಸರಳ. ಯಾರು ಭಕ್ತಿ-ಭಾವದಿಂದ ತನ್ನನ್ನು ಆರಾಧಿಸುವರೋ ಅವರಿಗೆ ಜೀವನದಲ್ಲಿ ಸಕಲವನ್ನು ಕರುಣಿಸುವನು. ಯಾರು ನಿರ್ಮಲ ಭಕ್ತಿಯಿಂದ ಶಿವನನ್ನು ಜಪಿಸುತ್ತಾ ಬಿಲ್ವ ಪತ್ರೆಯನ್ನು ಅರ್ಪಿಸುತ್ತಾರೋ ಅವರು ಜೀವನದಲ್ಲಿ ಪುಣ್ಯವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು.

ಪ್ರತಿಯೊಂದು ದೇವತೆಗಳಿಗೂ ವಿಭಿನ್ನವಾದ ಹೂವುಗಳು, ಎಲೆಗಳು ಮತ್ತು ತಿಂಡಿಗಳು ಶ್ರೇಷ್ಠತೆಯನ್ನು ಪಡೆದುಕೊಂಡಿವೆ. ಆಯಾ ದೇವರಿಗೆ ಇಷ್ಟವಾಗುವ ಹೂವು, ಎಲೆ, ಅಲಂಕಾರ ಮತ್ತು ನೈವೇದ್ಯಗಳನ್ನು ಅರ್ಪಿಸಿದಾಗ ದೇವತೆಗಳು ಸಂತೃಪ್ತಿಯನ್ನು ಪಡೆಯುವರು. ಜೊತೆಗೆ ತಮ್ಮ ಭಕ್ತರನ್ನು ಸಂತೋಷದಿಂದ ಹರಸುವರು ಎನ್ನುವ ನಂಬಿಕೆ ಇದೆ.

ಅಂತಹ ವಸ್ತುಗಳಲ್ಲಿ ಶಿವನಿಗೆ ಪ್ರಿಯವಾದದ್ದು ಎಂದರೆ ಬಿಲ್ವ ಪತ್ರೆ ಮತ್ತು ಭಸ್ಮ. ಬಿಲ್ವ ಪತ್ರೆಯು ಮೂರು ಎಲೆಯನ್ನು ಕೂಡಿರುವ ಕೊಂಡಿಯ ರೂಪದಲ್ಲಿ ಇರುತ್ತದೆ. ಇದು ಶಿವನ ಮೂರು ಕಣ್ಣು, ತ್ರಿಶೂಲದ ತುದಿ ಮತ್ತು ಬ್ರಹ್ಮಾಂಡದ ಅಧಿಪತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಸಂಕೇತಿಸುತ್ತದೆ. ಪತ್ರೆಯ ಮರವು ತ್ಯಾಗವನ್ನು ಸಂಕೇತಿಸುತ್ತದೆ. ಇದರ ಎಲೆಗಳು ಅತ್ಯಂತ ಔಷಧೀಯ ಗುಣಗಳನ್ನು ಒಳಗೊಂಡಿರುತ್ತವೆ.

ಪಿತ್ತದ ಶಮನ ಮತ್ತು ತಂಪನ್ನು ನೀಡುವ ಈ ಎಲೆಗಳು ದೇಹದ ಉಷ್ಣತೆ ಸಮತೋಲನದಲ್ಲಿ ಇರುವಂತೆ ಮಾಡುತ್ತವೆ. ಹಾಗಾಗಿಯೇ ಅತ್ಯಂತ ಶಕ್ತಿ ಹಾಗೂ ತಾಪವನ್ನು ಹೊಂದಿರುವ ಶಿವನಿಗೆ ಅರ್ಪಿಸಲಾಗುವುದು. ಅದು ಶಿವನ ತಾಪವನ್ನು ಕಡಿಮೆ ಮಾಡುವುದು. ಯಾರು ಭಕ್ತಿ ಭಾವದಿಂದ ಶಿವ ಪಾರ್ವತಿಯ ಪೂಜೆಯನ್ನು ಬಿಲ್ವ ಪತ್ರೆಯಿಂದ ಮಾಡುವರೋ ಅವರಿಗೆ ಆಧ್ಯಾತ್ಮಿಕ ಶಕ್ತಿ ದೊರೆಯುವುದು ಎಂದು ಹೇಳಲಾಗುವುದು.

ಬಿಲ್ವ ಮರವನ್ನು ಕೇವಲ ಯಜ್ಞಗಳಿಗೆ ಮತ್ತು ಧಾರ್ಮಿಕ ವಿಧಿ-ವಿಧಾನಗಳಿಗೆ ಮಾತ್ರ ಬಳಸುತ್ತಾರೆ. ಇದನ್ನು ಅನಗತ್ಯವಾಗಿ ಉರುವಲನ್ನಾಗಿ ಬಳಸುವುದು ಅಥವಾ ಇನ್ನಿತರ ಅಗತ್ಯತೆಗಳಿಗೆ ಬಳಸಿದರೆ ಶಿವನ ಕೋಪಕ್ಕೆ ಕಾರಣವಾಗುವುದು ಎಂದು ಹೇಳಲಾಗುತ್ತದೆ. ಶಿವನಿಗೆ ಮೀಸಲಾದ ಬಿಲ್ವ ಪತ್ರೆಯು ಹೇಗೆ ಧಾರ್ಮಿಕ ಮಹತ್ವವನ್ನು ಪಡೆದುಕೊಂಡ ಹಿನ್ನೆಲೆ, ಶಿವನೊಂದಿಗೆ ಪಡೆದ ಸಂಯೋಜನೆಯ ಕುರಿತು ಸಾಕಷ್ಟು ಪುರಾಣ ಕಥೆಗಳಿವೆ. ಅವುಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಪತ್ರೆ ಎಲೆಯು ಶಿವನ ಮೂರು ಕಣ್ಣುಗಳು

ತಾರಕಾಸುರ ಎನ್ನುವ ರಾಕ್ಷಸನು ಅತ್ಯಂತ ಕೆಟ್ಟ ರಾಕ್ಷಸನಾಗಿದ್ದನು. ಇವನು ಭೂಮಿಯನ್ನು ನಾಶ ಮಾಡಲು ಹಾಗೂ ಶಿವನ್ನು ಸೋಲಿಸಲು ಅತ್ಯಂತ ವಿನಾಶಕಾರಿ ವಸ್ತುಗಳಿಂದ ಆಯುಧಗಳನ್ನು ಮಾಡಿಕೊಂಡಿದ್ದನು. ಆಳವಾದ ಧ್ಯಾನದಲ್ಲಿ ಮುಳುಗಿದ್ದ ಶಿವನ ತಪಸ್ಸು ಭಂಗವಾದಾಗ ಶಿವನು ಆ ಎಲ್ಲಾ ಆಯುಧಗಳನ್ನು ತನ್ನ ದೇಹದಲ್ಲಿ ಹೀರಿಕೊಂಡನು. ಜೊತೆಗೆ ಮೂರನೇ ಕಣ್ಣನ್ನು ಬಿಟ್ಟು ಅವನನ್ನು ವಿನಾಶಗೊಳಿಸಿದನು.
ಶಿವನು ಯಾರನ್ನು ಸಂಪೂರ್ಣವಾಗಿ ನಾಶಗೊಳಿಸಲು ಬಯಸುತ್ತಾನೋ ಆಗ ತನ್ನ ಮೂರನೇ ಕಣ್ಣನ್ನು ಬಿಟ್ಟು ನಾಶಗೊಳಿಸುವನು. ಶಿವನ ಮೂರನೇಯ ಕಣ್ಣು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಈ ಕಣ್ಣುಗಳನ್ನು ಬಿಲ್ವ ಪತ್ರೆಯು ಸಂಕೇತಿಸುತ್ತದೆ. ಹಾಗಾಗಿ ಶಿವನ ಪೂಜೆಗೆ ಈ ಪತ್ರೆಯನ್ನು ಅಗತ್ಯವಾಗಿ ಅರ್ಪಿಸಬೇಕು. ಇದರಿಂದ ಶಿವನು ಪ್ರಸನ್ನನಾಗುವನು.

ಮೂರು ಗುಣಗಳ ಸಂಕೇತ

ಬಿಲ್ವ ಪತ್ರೆಯು ಪ್ರಮುಖವಾಗಿ ಮೂರು ಗುಣಗಳನ್ನು ಸಂಕೇತಿಸುತ್ತದೆ. ಅಂದರೆ ತಾಮಸ(ಭೌತಿಕ ದೇಹ), ರಾಜಸ (ಭಾವನೆಗಳು) ಮತ್ತು ಸಾತ್ವಿಕ(ಬುದ್ಧಿಶಕ್ತಿ). ಬಿಲ್ವ ಪತ್ರೆಯಲ್ಲಿ ಸಾತ್ವಿಕ ಘಟಕದ ಪ್ರಮಾಣವು ಹೆಚ್ಚಾಗಿರುತ್ತದೆ. ಹಾಗಾಗಿಯೇ ಪತ್ರೆಯ ಎಲೆಗಳು ಸಾತ್ವಿಕ ಆವರ್ತನಗಳನ್ನು ಹೀರಿಕೊಳ್ಳಲು ಹಾಗೂ ಹೊರ ಹಾಕಲು ಅತ್ಯಂತ ಶಕ್ತಿಯನ್ನು ಪಡೆದುಕೊಂಡಿದೆ. ಯಾವ ವ್ಯಕ್ತಿ ದೈಹಿಕ, ಮಾನಸಿಕ ಮತ್ತು ಬೌದ್ಧಿಕತೆಯನ್ನು ಸಮತೋಲಿತ ರೀತಿಯಲ್ಲಿ ಬಳಸುತ್ತಾನೋ, ಆತನ ಆತ್ಮವು ವಿಮೋಚನೆ ಅಥವಾ ಮೋಕ್ಷವನ್ನು ಪಡೆಯುತ್ತದೆ.

ಬಿಲ್ವ ಪತ್ರೆಯ ದಂತ ಕಥೆಗಳು

ಅಗ್ನಿ ಪುರಾಣದ ಪ್ರಕಾರ, ಶುಭ ದಿನಗಳಲ್ಲಿ ಉಪವಾಸವನ್ನು ಕೈಗೊಂಡು ಶಿವನಿಗೆ ಪೂಜಿಸಬೇಕು ಎಂದು ಹೇಳಲಾಗುವುದು. ಉಪವಾಸ ಕ್ರಮವನ್ನು ಅನುಸರಿಸಿ ರಾತ್ರಿ ಬಿಲ್ವ ಪತ್ರೆಯನ್ನು ಸೇವಿಸಬೇಕು ಎಂದು ಪದ್ಮ ಪುರಾಣ ಹೇಳುತ್ತದೆ. ಬ್ರಹ್ಮ ಪುರಾಣದ ಪ್ರಕಾರ ಶಿವನು ಒಮ್ಮೆ ರಾಕ್ಷಸರಿಂದ ತಪ್ಪಿಸಿಕೊಳ್ಳಲು ಬಿಲ್ವ ಪತ್ರೆಯ ಎಲೆಯ ಹಿಂದೆ ಅಡಗಿ ಕುಳಿತಿದ್ದ ಎಂದು ಹೇಳಲಾಗುವುದು. ಪಾರ್ವತಿ ದೇವಿಯು ತಪಸ್ಸು ಮಾಡುವಾಗ ಬಿಲ್ವ ಪತ್ರೆಯ ಗಿಡವು ನೆಲದ ಮೇಲೆ ಬಿದ್ದಿತ್ತು. ಆಗ ಪಾರ್ವತಿ ದೇವಿಯ ಬೆವರನ್ನು ಪಡೆದು ಬೆಳೆದು ನಿಂತಿತು. ಹಾಗಾಗಿಯೇ ಈ ಮರದ ಪ್ರತಿಯೊಂದು ಭಾಗವೂ ಪಾರ್ವತಿ ದೇವಿಯ ಅವತಾರವನ್ನು ಸೂಚಿಸುತ್ತದೆ ಎಂದು ಸ್ಕಂದ ಪುರಾಣ ತಿಳಿಸುತ್ತದೆ.

ಶಿವನೊಂದಿಗೆ ಸಂಯೋಗ ಪಡೆದ ಬಿಲ್ವ ಪತ್ರೆಯ ಪುರಾಣ ಕಥೆಗಳು

ಬೃಹಧರ್ಮ ಪುರಾಣ ತಿಳಿಸುವ ಪ್ರಕಾರ, ಲಕ್ಷ್ಮಿ ದೇವಿಯು ಶಿವನನ್ನು ಪ್ರಾರ್ಥಿಸುತ್ತಾ 10,000 ಕಮಲದ ಮೊಗ್ಗುಗಳನ್ನು ಅರ್ಪಿಸುತ್ತಿದ್ದಳು. ಒಂದು ದಿನ ಎರಡು ಮೊಗ್ಗುಗಳು ಕಡಿಮೆಯಾದವು. ವಿಷ್ಣು ದೇವನು ತನ್ನ ಸ್ತನಗಳನ್ನು ಕಮಲದ ಮೊಗ್ಗಿಗೆ ಹೋಲಿಸಿದ್ದು ನೆನಪಾಯಿತು. ಆಗ ಒಂದು ಸ್ತನವನ್ನು ಕತ್ತರಿಸಿ ನಮೃತೆಯಿಂದ ಶಿವನಿಗೆ ಅರ್ಪಿಸಿದಳು. ನಂತರ ಇನ್ನೊಂದು ಸ್ತನವನ್ನು ಕತ್ತರಿಸುವಾಗ ಶಿವನು ಅವಳನ್ನು ತಡೆದನು. ಅವಳು ಕತ್ತರಿಸಿದ ಸ್ತನವು ಬಿಲ್ವ ಹಣ್ಣಾಗಿ ಮಾರ್ಪಟ್ಟಿತು. ಭವಿಷ್ಯ ಪುರಾಣದ ಪ್ರಕಾರ, ಸಮುದ್ರ ಮಂಥನದ ನಂತರ ಭದ್ರಾ ಒಂಬತ್ತನೇಯ ದಿನ ಲಕ್ಷ್ಮಿದೇವಿ ಸಾಗರದಿಂದ ಹೊರ ಹೊಮ್ಮಿ ಬಿಲ್ವ ಪತ್ರೆಯ ಮರದ ಮೇಲೆ ವಿಶ್ರಾಂತಿಯನ್ನು ಪಡೆದಳು ಎಂದು ಪುರಾಣ ಹೇಳುತ್ತದೆ. ಹಾಗಾಗಿ ಪ್ರತಿ ವರ್ಷವೂ ಅಂದು ಬಿಲ್ವ ಪತ್ರೆಯ ಮರಕ್ಕೆ ಪೂಜೆಯನ್ನು ಮಾಡಲಾಗುವುದು.

ಶಿವ ರಾತ್ರಿಯ ಕಥೆ

ಒಮ್ಮೆ ಬೇಟೆಗಾರನು ಶಿವ ರಾತ್ರಿಯ ದಿನ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡು ಅಲೆದಾಡುತ್ತಿದ್ದ. ಇದ್ದಕ್ಕಿದ್ದಂತೆ ಹುಲಿಗ ಘರ್ಜನೆ ಕೇಳಿ ಬಂದಿತು. ಆಗ ಅವನು ಗಾಬರಿಯಿಂದ ಬಳಿಯೇ ಇದ್ದ ಮರವನ್ನು ಹತ್ತಿ ಕುಳಿತ. ನಂತರ ಹುಲಿಯಿಂದ ಪಾರಾಗಲು ಆಗದೆ ಇರುವುದಕ್ಕೆ ರಾತ್ರಿಯೆಲ್ಲಾ ಮರದ ಮೇಲೆ ಕುಳಿತು, ನಿರ್ಮಲ ಮನಸ್ಸಿನಿಂದ ಎಲೆಯನ್ನು ಕಿತ್ತು ನೆಲಕ್ಕೆ ಎಸೆಯುತ್ತಿದ್ದ. ಆ ಮರದ ಕೆಳಗೆ ಶಿವಲಿಂಗ ಇತ್ತು. ಅವನು ರಾತ್ರಿಯೆಲ್ಲಾ ಬಿಲ್ವದ ಎಲೆಯನ್ನು ಕಿತ್ತು ಹಾಕಿರುವುದು ಸಾವಿರಾರು ಎಲೆಗಳಾಗಿದ್ದವು. ಶಿವನ ಕೃಪೆಯಿಂದ ಹುಲಿ ಬಾಯಿಂದ ಪಾರಾದೆ ಎನ್ನುವುದು ಅರಿವಿಗೆ ಬಂತು. ನಿರ್ಮಲ ಮನಸ್ಸಿನಿಂದ ಬಿಲ್ವ ಎಲೆಯನ್ನು ಶಿವಲಿಂಗದ ಮೇಲೆ ಹಾಕಿರುವುದು, ಅವನಿಗೆ ಶಿವನ ಆಶೀರ್ವಾದ ಪಡೆಯಲು ಸಹಾಯವಾಯಿತು.

ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸುವಾಗ ಹೇಳುವ ಮಂತ್ರ

ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಿಸುವಾಗ ಈ ಮಂತ್ರವನ್ನು ಹೇಳಬೇಕು. ಆಗ ಶಿವನು ಪ್ರಸನ್ನನಾಗುವನು.
“ಲಕ್ಷ್ಮೈಶ್ಚ ಸ್ತನ ಉತ್ಪನಂ ಮಹಾದೇವ ಸದಾ ಪ್ರಿಯಮ್,
ಬಿಲ್ವ ವೃಕ್ಷಮ್ ಪ್ರಯಾಚ್‌ಚ್ಚಾಮಿ ಏಕ ಬಿಲ್ವಮ್ ಶಿವಾರ್ಪಣಮ್”
ಅನುವಾದ: ಲಕ್ಷ್ಮಿ ದೇವಿಯ ಹೃದಯದಿಂದ ಜನಿಸಿದ ಬಿಲ್ವ ಮರವು ಮಹಾದೇವನಿಗೆ ಎಂದೆಂದಿಗೂ ಪ್ರಿಯವಾಗಿದೆ. ಹಾಗಾಗಿ ಒಂದು ಬಿಲ್ವ ಎಲೆಯನ್ನು ಅರ್ಪಿಸಲು ನಾನು ಈ ಮರವನ್ನು ಕೇಳಿಕೊಳ್ಳುತ್ತೇನೆ. ಒಬ್ಬ ವ್ಯಕ್ತಿ ಬಿಲ್ವ ಮರವನ್ನು ಕಂಡಾಗ ಅದನ್ನು ಮುಟ್ಟಿ ನಮಸ್ಕರಿಸಿದರೂ ಸಹ ಪುಣ್ಯ ಪ್ರಾಪ್ತಿಯಾಗುವುದು. ಅಲ್ಲದೆ ಅವನ ಪಾಪಗಳೆಲ್ಲವೂ ಮುಕ್ತವಾಗುತ್ತವೆ ಎಂದು ಹೇಳಲಾಗುವುದು.

ಬಿಲ್ವ ಮರದ ಮೇಲೆ ವಾಸಿಸುವ ದೇವತೆಗಳು

ಪಾರ್ವತಿ ದೇವಿ ಮಂದಾರ ಪರ್ವತದಲ್ಲಿ ಒಮ್ಮೆ ವಿಶ್ರಾಂತಿ ಪಡೆಯುತ್ತಿರುವಾಗ ಅವಳ ಹಣೆಯಿಂದ ಕೆಲವು ಹನಿ ಬೆವರುಗಳು ಉದುರಿದವು. ಅವುಗಳಿಂದ ಬಿಲ್ವ ಮರವು ಬೆಳೆಯಿತು ಎಂದು ಪುರಾಣ ಕಥೆ ಹೇಳುತ್ತದೆ. ಬಿಲ್ವ ಮರದ ಬೇರುಗಳು ಮಹೇಶ್ವರಿಯ ರೂಪ, ಕೊಂಬೆಗಳು ದಾಕ್ಷಾಯಿಣಿ ರೂಪ, ಎಲೆಗಳು ಪಾರ್ವತಿಯ ರೂಪ, ಹಣ್ಣುಗಳು ಕಾತ್ಯಾಯಿನಿ ರೂಪ, ಹೂವುಗಳು ಗೌರಿ ರೂಪ, ಮರದ ಮುಳ್ಳುಗಳು ಶಕ್ತಿ ರೂಪವನ್ನು ಪ್ರತಿ ನಿಧಿಸುತ್ತವೆ. ಅಂತೆಯೇ ಸಂಪತ್ತಿನ ದೇವತೆಯಾದ ಲಕ್ಷ್ಮಿ ಸಹ ಬಿಲ್ವ ಮರದ ಮೇಲೆ ಇರುತ್ತಾಳೆ ಎಂದು ಹೇಳಲಾಗುವುದು.

ಮನೆಯ ಆವರಣದಲ್ಲಿ ಬಿಲ್ವ ಯಾಕೆ ನೆಡಬಾರದು ಗೊತ್ತಾ?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕಟ್ಟದ ಸುತ್ತ ಬಿಲ್ವ ಪತ್ರೆಯ ಗಿವವನ್ನು ನೆಡಬಾರದು. ಈ ಮರದ ನೆರಳು ಮನೆಯ ಮೇಲೆ ಬೀಳಬಾರದು. ಈ ಮರದ ನೆರಳಿನಲ್ಲಿ ಯಾರೂ ವಿಶ್ರಾಂತಿ ಪಡೆಯಬಾರದು ಎಂದು ಹೇಳಲಾಗುವುದು. ಬೇವಿನ ಮರವನ್ನು ಹೊರತು ಪಡಿಸಿ, ಉಳಿದ ಮರಗಳು ರಾತ್ರಿಯ ವೇಳೆ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೊರ ಹಾಕುತ್ತವೆ. ಅವು ಮನುಷ್ಯನಿಗೆ ಹಾನಿಕಾರಕ. ಹಾಗಾಗಿ ಗುಡ್ಡ ಮತ್ತು ತೋಟದ ಪ್ರದೇಶದಲ್ಲಿ ನೆಡಬಹುದು ಎಂದು ಹೇಳಲಾಗುವುದು.

Leave A Reply

Your email address will not be published.