ಪೂಜಾ ಕೋಣೆಯಲ್ಲಿ ದೀಪ ಹಚ್ಚುವಾಗ ಈ ಒಂದು ತಪ್ಪು ಆಗಬಾರದು!

0 5,626

ದೇವರ ಪೂಜೆಯಲ್ಲಿ ನಾವು ಒಂದು ಚಿಕ್ಕ ತಪ್ಪು ಮಾಡಿದರೂ ಅದರಿಂದ ನಮ್ಮ ಸಂಪೂರ್ಣ ಪೂಜೆಯ ಫಲ ಸಿಗದಂತಾಗುತ್ತದೆ. ಪೂಜೆಯ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡುವುದು ಉತ್ತಮ. ಅದರಲ್ಲೂ ದೇವರಿಗೆ ದೀಪ ಹಚ್ಚುವಾಗ ಹೆಚ್ಚು ಎಚ್ಚರಿಕೆಯಿಂದಿರಬೇಕು. ದೇವರಿಗೆ ದೀಪವನ್ನು ಹಚ್ಚುವುದು ಹೇಗೆ..? ಯಾವ ದಿಕ್ಕಿನಲ್ಲಿ ನಾವು ದೇವರಿಗೆ ದೀಪವನ್ನು ಹಚ್ಚಿಡಬೇಕು ಗೊತ್ತಾ..?

ಸನಾತನ ಧರ್ಮವಾದ ನಮ್ಮ ಹಿಂದೂ ಧರ್ಮದಲ್ಲಿ ಶಾಸ್ತ್ರಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ಶಾಸ್ತ್ರಗಳು ಮನೆ, ಕಛೇರಿ, ದೇವಸ್ಥಾನ ಮತ್ತು ದೇವರಕೋಣೆ ಸೇರಿದಂತೆ ಇನ್ನಿತರ ಸ್ಥಳಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಮನೆಯಿಂದ ನಕಾರಾತ್ಮಕತೆಯನ್ನು ತೊಡೆದುಹಾಕುಲು ಮತ್ತು ಧನಾತ್ಮಕತೆಯನ್ನು ವೃದ್ಧಿಸಲು ನಮ್ಮ ಶಾಸ್ತ್ರಗಳಲ್ಲಿ ಸಾಕಷ್ಟು ನಿಯಮಗಳನ್ನು ನೀಡಲಾಗಿದೆ. ದೇವರ ಕೋಣೆಯಲ್ಲಿ ನಾವು ಹಚ್ಚುವ ದೀಪವು ಕೂಡ ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಾಗಿಸುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿ ದೇವರ ಪೂಜೆಯಲ್ಲೂ ಬೆಳಗಿಸುವ ಸಂಪ್ರದಾಯವಿದೆ. ದೇವರಿಗೆ ದೀಪವನ್ನು ಬೆಳಗಿಸದೆ ಪೂಜೆಯನ್ನು ಪೂರ್ಣವೆಂದು ಪರಿಗಣಿಸಲಾಗುವುದಿಲ್ಲ.

ನಾವು ದೇವರಿಗೆ ಬೆಳಗುವ ದೀಪವು ಸಕಾರಾತ್ಮಕತೆಯ ಸಂಕೇತವಾಗಿದೆ. ದೀಪದ ಬೆಳಕು ಹೇಗೆ ಕತ್ತಲೆಯನ್ನು ದೂರಾಗಿಸಿ, ಬೆಳಕನ್ನು ಚೆಲ್ಲುತ್ತದೆಯೋ ಹಾಗೇ, ಮನೆಯಲ್ಲಿನ ಋಣಾತ್ಮಕತೆಯನ್ನು ದೂರಾಗಿಸಿ, ಗುಣಾತ್ಮಕತೆಯನ್ನು ಹೆಚ್ಚಾಗಿಸುತ್ತದೆ. ಮನೆಯ ನಕಾರಾತ್ಮಕತೆಯನ್ನು ದೂರಾಗಿಸಲು ನಾವು ಮನೆಯಲ್ಲಿ ದೀಪವನ್ನು ಬೆಳಗಬೇಕೆಂದು ಹೇಳಲಾಗುತ್ತದೆ. ದೇವರಿಗೆ ನಾವು ಕೆಲವೊಮ್ಮೆ ತುಪ್ಪದ ದೀಪವನ್ನು ಹಚ್ಚುತ್ತೇವೆ. ಇನ್ನು ಕೆಲವೊಮ್ಮೆ ಎಣ್ಣೆಯ ದೀಪವನ್ನು ಹಚ್ಚುತ್ತೇವೆ. ಆದರೆ, ತುಪ್ಪದ ದೀಪವನ್ನು ಯಾವಾಗ ಬೆಳಗಬೇಕು..? ಎಣ್ಣೆಯ ದೀಪವನ್ನು ಯಾವಾಗ ಬೆಳಗಬೇಕು ಎಂಬುದರ ಕುರಿತು ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಗೊಂದಲಗಳಿಗೆ ನಾವು ಈ ಲೇಖನದ ಮೂಲಕ ಪರಿಹಾರ ನೀಡುತ್ತೇವೆ.

ಯಾವ ದೀಪವನ್ನು ಬೆಳಗಿಸುವುದು ಮಂಗಳಕರ..?

ಹಿಂದೂ ಧರ್ಮದಲ್ಲಿ, ದೇವರು ಮತ್ತು ದೇವತೆಗಳ ಮುಂದೆ ತುಪ್ಪ ಮತ್ತು ಎಣ್ಣೆ ದೀಪಗಳನ್ನು ಬೆಳಗಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು ಮತ್ತು ದೇವರ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಹಚ್ಚಬೇಕು. ಅಂದರೆ ನೀವು ದೇವರಿಗೆ ದೀಪವನ್ನು ಹಚ್ಚಿಡುವಾಗ ನಿಮ್ಮ ಬಲಭಾಗಕ್ಕೆ ಎಣ್ಣೆಯ ದೀಪವನ್ನು ಮತ್ತು ನಿಮ್ಮ ಎಡಭಾಗಕ್ಕೆ ತುಪ್ಪದ ದೀಪವನ್ನು ಹಚ್ಚಿಡಬೇಕು. ಇದು ನೀವು ದೇವರಿಗೆ ದೀಪವನ್ನು ಬೆಳಗುವ ಸರಿಯಾದ ಮಾರ್ಗವಾಗಿದೆ.

ದೀಪವನ್ನು ಬೆಳಗಿಸುವಾಗ ಇದನ್ನು ನೆನಪಿನಲ್ಲಿಡಿ..

ನೀವು ದೇವರಿಗೆ ದೀಪವನ್ನು ಬೆಳಗಿಸುವಾಗ ಯಾವಾಗಲೂ ದೇವರ ವಿಗ್ರಹ ಅಥವಾ ಚಿತ್ರದ ಮುಂದೆ ಮಾತ್ರ ದೀಪವನ್ನು ಬೆಳಗಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ದೇವರ ವಿಗ್ರಹದ ಹಿಂಭಾಗದಲ್ಲಿ ಅಥವಾ ದೇವರ ವಿಗ್ರಹಕ್ಕಿಂತಲೂ ತುಂಬಾ ದೂದರದಲ್ಲಿ ದೀಪವನ್ನು ಹಚ್ಚಿಡಬಾರದು.

ನಾವೀಗಾಗಲೇ ಹೇಳಿರುವ ಹಾಗೆ ದೇವರ ದೀಪವನ್ನು ಕೇವಲ ಎಡಭಾಗದಲ್ಲಿ, ಬಲಭಾಗದಲ್ಲಿ ಮಾತ್ರ ಹಚ್ಚಿಡಬೇಕು. ಅದರಲ್ಲೂ ತಪ್ಪಿಯೂ ಪಶ್ಚಿಮ ದಿಕ್ಕಿನಲ್ಲಿ ಮರೆತು ಕೂಡ ದೇವರಿಗೆ ಹಚ್ಚಿಡಬಾರದು. ಪಶ್ಚಿಮ ದಿಕ್ಕಿನಲ್ಲಿ ದೀಪವನ್ನು ಹಚ್ಚಿಡುವುದರಿಂದ ನೀವು ಬಡತನವನ್ನು ಮತ್ತು ಸಂಪತ್ತಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲೇ ನೆಲಸಬೇಕೆಂದು ಬಯಸಿದರೆ, ಮುಸ್ಸಂಜೆಯಲ್ಲಿ ಮನೆಯ ಮುಖ್ಯ ದ್ವಾರದ ಬಳಿ ದೀಪವನ್ನು ಹಚ್ಚಿಡಬೇಕು. ಇದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಮೆನೆಗೆ ಸಂಪತ್ತನ್ನು ನೀಡುತ್ತಾಳೆ.

ಪಶ್ಚಿಮ ದಿಕ್ಕಿನಲ್ಲಿ ಮಾತ್ರವಲ್ಲ, ನೀವು ಉತ್ತರ ದಿಕ್ಕಿನಲ್ಲೂ ದೀಪವನ್ನು ಬೆಳಗಬಾರದು. ಈ ದಿಕ್ಕಿನಲ್ಲಿ ನೀವು ದೇವರಿಗೆ ದೀಪವನ್ನು ಹಚ್ಚಿದರೆ ಮನೆಯಲ್ಲಿ ಖಂಡಿತ ಬಡತನ ಬರುತ್ತದೆ.

ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ದೇವರ ಪೂಜೆಯನ್ನು ಮಾಡುವುದು ಎಷ್ಟು ಮುಖ್ಯವೋ ಅಷ್ಟೇ ದೇವರಿಗೆ ದೀಪವನ್ನು ಹಚ್ಚುವಾಗ ನಾವು ನಿಯಮಗಳನ್ನು ಅನುಸರಿಸುವುದು ಕೂಡ ಮುಖ್ಯವಾಗಿರುತ್ತದೆ. ದೇವರಿಗೆ ನಾವು ದೀಪವನ್ನು ಹಚ್ಚುವಾಗ ನಾವು ದೀಪ ಹಚ್ಚುವ ದಿಕ್ಕಿನ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು.

Leave A Reply

Your email address will not be published.