ಸಮಸ್ಯೆಗಳಿಗೆ ಗುಡ್ ಬೈ ಹೇಳು | ಒಬ್ಬ ಶಿಕ್ಷಕನ ಕಥೆ

0 871

ಜೀವನದಲ್ಲಿ ಸಮಸ್ಯೆ ಗಳು ಅನ್ನೋದು ಜೀವನದ ಒಂದು ಭಾಗವಾದ್ರೆ, ಅದನ್ನ ಎದುರಿಸಿ ಜೀವನ ನಡೆಸೋದು ಒಂದು ಕಲೆಯಾಗಿರುತ್ತೆ.. ಅಂದ್ರೆ ಪ್ರಾಬ್ಲಮ್ಸ್ ಅನ್ನೋದು ಪಾರ್ಟ್ ಆಫ್ ಲೈಫ್ ಆದ್ರೆ, ಅದನ್ನ, ಎದುರಿಸೋದು ಆರ್ಟ್ ಆಫ್ ಲೈಫ್ ಆಗಿರುತ್ತೆ..

ಸಮಸ್ಯೆಗಳು ಎದುರಾದ ಸಮಯದಲ್ಲಿ ಏನು ಮಾಡಬೇಕು, ಸಮಸ್ಯೆಗಳನ್ನ ಹೇಗೆ ಪರಿಹಾರ ಮಾಡ್ಕೋಬೇಕು, ಸಮಸ್ಯೆಗಳನ್ನ ಹೇಗೆ ಎದುರಿಸಬೇಕು ಅನ್ನೋ ವಿಚಾರವಾಗಿ ನೀವು ಈಗಾಗಲೇ ಸಾಕಷ್ಟು ವೀಡಿಯೋಗಳನ್ನ ನೋಡಿರಬಹುದು, ಬನ್ನಿ ಇವತ್ತು ಈ ಕಷ್ಟ ಅಥವಾ ಸಮಸ್ಯೆ ಅನ್ನೋದರ ಕಥೆಯನ್ನೇ ಮುಗಿಸಿ ಬಿಡೋಣ..

ನಾನಿವತ್ತು ನಿಮಗೊಂದು ಕಥೆ ಹೇಳ್ತೀನಿ, ಒಬ್ಬ ಶಿಕ್ಷಕನ ಕಥೆ… ಸ್ಪೂರ್ತಿ ಪಡೆಯೋದಿಕ್ಕೆ ಸ್ಪೂರ್ತಿಯ ಮಾತುಗಳ ಬದಲಾಗಿ, ಕಥೆ ಯಾಕೆ ಅಂತ ಏನಾದ್ರೂ ನಿಮ್ಮ ಮನಸ್ಸಲ್ಲಿ ಪ್ರಶ್ನೆ ಇದ್ರೆ ಮೊದಲು ಅದಕ್ಕೂ ಉತ್ತರ ಹೇಳಿ ಬಿಡ್ತೀನಿ ಕೇಳಿ…

ನಾನು ಸ್ಪೂರ್ತಿಯ ಮಾತುಗಳನ್ನು ಹೇಳಿದ್ರೆ ನೀವು ಒಂದೆರಡು ದಿನಗಳ ನಂತರ ಅದನ್ನ ಮರೆತು ಹೋಗಬಹುದು.. ಆದ್ರೆ ಒಂದು ಕಥೆಯನ್ನ ಕೇಳಿದಾಗ ಅದರ ಪ್ರತಿಯೊಂದು ಸಾಲು ನೆನಪಿನಲ್ಲಿ ಇರತ್ತೆ, ಆ ಕಥೆಯ ಸಾರ ಮತ್ತೆ ಮತ್ತೆ ನೆನಪಾಗುತ್ತೆ, ಅದಕ್ಕೆ ನಾವು ಕಥೆಯನ್ನ ಅಷ್ಟು ಸುಲಭವಾಗಿ ಮರೆಯೋದಿಲ್ಲ..

ಅದಕ್ಕೆ ಇನ್ನು ಮುಂದೆ ನಿಮ್ಮ ಜೀವನದಲ್ಲಿ ಕಷ್ಟ ಅಥವಾ ಸಮಸ್ಯೆ ಎದುರಾದಾಗ ಈ ಕಥೆಯನ್ನ ಒಮ್ಮೆ ನೆನಪಿಸಿಕೊಳ್ಳಿ..

ಒಂದು ದಿನ ಶಿಕ್ಷಕರೊಬ್ಬರು ತರಗತಿಗೆ ಬಂದು ಎಲ್ಲಾ ವಿದ್ಯಾರ್ಥಿಗಳ ಕೈಗೆ ಒಂದು ಬಿಳಿಯ ಹಾಳೆಯನ್ನ ಕೊಟ್ರು.. ವಿದ್ಯಾರ್ಥಿಗಳು ಆ ಹಾಳೆಯನ್ನು ನೋಡಿದ್ರು, ಹಾಳೆಯ ಮಧ್ಯದಲ್ಲಿ ಕಪ್ಪು ಬಣ್ಣ ತುಂಬಿದ ಒಂದು ಸಣ್ಣ ವೃತ್ತವನ್ನು ಬರೆಯಲಾಗಿತ್ತು.

ಆಗ ಶಿಕ್ಷಕ , ವಿದ್ಯಾರ್ಥಿಗಳೇ ನಿಮಗೆ ಆ ಹಾಳೆಯಲ್ಲಿ ಏನು ಕಾಣ್ತಿದೆ ಅಂತ ಕೇಳಿದ್ರು.. ಆಗ ಎಲ್ಲಾ ವಿದ್ಯಾರ್ಥಿಗಳು ಸರ್, ಹಾಳೆಯ ಮಧ್ಯದಲ್ಲಿ ಒಂದು ಕಪ್ಪು ಬಣ್ಣದ ಸರ್ಕಲ್ ಇದೆ ಅಂತ ಹೇಳಿದ್ರು.. ಶಿಕ್ಷಕ ಆಗ, ಮತ್ತೊಮ್ಮೆ ಸರಿಯಾಗಿ ನೋಡಿ ನಿಮಗೆ ಆ ಹಾಳೆಯಲ್ಲಿ ಏನು ಕಾಣ್ತಿದೆ ಹೇಳಿ ಅಂದ್ರು… ಈ ಸಲ ಕೂಡಾ ವಿದ್ಯಾರ್ಥಿಗಳು ಮೊದಲಿನ ಹಾಗೆ ಹಾಳೆಯ ಮಧ್ಯದಲ್ಲಿ ಕಪ್ಪು ಬಣ್ಣದ ಸರ್ಕಲ್ ಕಾಣ್ತಿದೆ ಅಂದ್ರು..

ಶಿಕ್ಷಕ ಮತ್ತೊಮ್ಮೆ ಅದೇ ಪ್ರಶ್ನೆ ಕೇಳಿದರು, ವಿದ್ಯಾರ್ಥಿಗಳಿಂದ ಮೊದಲ ಎರಡು ಸಲ ಬಂದ ಉತ್ತರವೇ ಮತ್ತೆ ಬಂತು.. ಶಿಕ್ಷಕರು ಅಷ್ಟಕ್ಕೇ ಸುಮ್ಮನಾಗಲಿಲ್ಲ.. ಅವರು ಮತ್ತೆ ಐದಾರು ಸಲ ಅದೇ ಪ್ರಶ್ನೆಯನ್ನ ಕೇಳಿದ್ರೂ ವಿದ್ಯಾರ್ಥಿಗಳ ಉತ್ತರ ಒಂದೇ ಆಗಿತ್ತು.

ಆಗ ಶಿಕ್ಷಕ, ವಿದ್ಯಾರ್ಥಿಗಳೇ ನಾನು ಆ ಹಾಳೆಯಲ್ಲಿ ಏನು ಕಾಣ್ತಿದೆ ಎಷ್ಟು ಸಲ ಕೇಳಿದ್ರು, ನೀವು ಅದರಲ್ಲಿ ಕಪ್ಪು ಬಣ್ಣದ ಸರ್ಕಲ್ ಇದೆ ಅಂತಾನೇ ಹೇಳ್ತಾ ಇದ್ದೀರಾ, ಆದ್ರೆ ನಿಮ್ಮ ಯಾರ ಕಣ್ಣಿಗೂ ಅ ಸರ್ಕಲ್ ನ ಸುತ್ತಾ ಅದೇ ಹಾಳೆಯಲ್ಲಿ ಎಷ್ಟು ದೊಡ್ಡ ಖಾಲಿ ಜಾಗ ಇದೆ ಅನ್ನೋದು ಕಾಣಲಿಲ್ವಾ?? ಅಂದ್ರು.. ಆಗ ವಿದ್ಯಾರ್ಥಿಗಳು ಹೌದಲ್ವಾ ಅಂತ ಯೋಚನೆ ಮಾಡೋದಕ್ಕೆ ಶುರು ಮಾಡಿದ್ರು..

ನಾವು ಕೂಡಾ ಹೀಗೆ ಅಲ್ವಾ ಸ್ನೇಹಿತರೇ, ಭಗವಂತ ನಮಗೆ ಒಂದು ಒಳ್ಳೆಯ ಹಾಗೂ ಸುಂದರವಾದ ಜೀವನವನ್ನ ಕೊಟ್ಟಿದ್ದಾನೆ. ಆದ್ರೆ ನಾವು ಅದರಲ್ಲಿ ಒಂದು ಸಣ್ಣ ಸಮಸ್ಯೆ ಎದುರಾದ್ರು ಅದರ ಬಗ್ಗೆ ಆಲೋಚನೆ ಮಾಡ್ತಾ ಕೂತು ಬಿಡ್ತೇವೆ.. ಸ್ವಲ್ಪ ಆ ಸಮಸ್ಯೆಯಿಂದ ಹೊರಗೆ ಬಂದು ನೋಡಿ, ಬಹಳ ದೊಡ್ಡ ಜೀವನ ನಿಮ್ಮ ಮುಂದೆ ಕಾಣುತ್ತೆ..

ಅದಕ್ಕೆ ನಾನು ಹೇಳೋದೇನು ಅಂದ್ರೆ ಜೀವನದಲ್ಲಿ ಸಮಸ್ಯೆ ಅನ್ನೋದು ಎದುರಾದಾಗ ಅದರಿಂದ ಹೊರಗೆ ಬಂದು ಆಲೋಚನೆ ಮಾಡಿ.. ಅದನ್ನ ಬಿಟ್ಟು ನೀವು ಆ ಸಮಸ್ಯೆ ಬಗ್ಗೇನೇ ಆಲೋಚನೆ ಮಾಡಿದಷ್ಟು ಅದು ದೊಡ್ಡದಾಗುತ್ತೆ..

ಸಮಸ್ಯೆಯಿದ್ದರೂ ಯಾರು ಧೈರ್ಯವಾಗಿ ಮುಗುಳ್ಳಗ್ತಾನೋ ಅವನ ಅರ್ಧ ಸಮಸ್ಯೆ ಅಲ್ಲೇ ಪರಿಹಾರ ಆಗಿ ಬಿಡುತ್ತೆ..

ನಮ್ಮ ಜೀವನದಲ್ಲಿ ಕಷ್ಟ, ಸಮಸ್ಯೆ ಇದೆಲ್ಲಾ ಬರುತ್ತೆ ಹೋಗುತ್ತೆ ಆದರೆ ಅದಕ್ಕಾಗಿ ದುಃಖ ಪಡದೇ, ಚಿಂತೆ ಮಾಡ್ತಾ ಕೂರದೇ, ಅದನ್ನ ಎದುರಿಸೋದಕ್ಕೆ ಧೈರ್ಯವಾಗಿ ಮುಗುಳ್ನಗುತ್ತಾ ಮುಂದೆ ಹೆಜ್ಜೆ ಹಾಕೋಣ…

Leave A Reply

Your email address will not be published.