ದರ್ಬೆ ಎಂದರೆ ಕೇವಲ ಹುಲ್ಲು ಮಾತ್ರನಾ?ಏನಿದರ ಮಹತ್ವ!

0 342

ದರ್ಬೆಯನ್ನು ಅನಾದಿ ಕಾಲದಿಂದಲೂ ಪೂಜಾ ಕೈಂಕರ್ಯಗಳಲ್ಲಿ ಉಪಯೋಗಿಸಿಕೊಂಡು ಬರಲಾಗಿದೆ. ವೇದಗಳ ಕಾಲದಿಂದಲೂ ದೇವರ ಆಸನದ ಜಾಗದಲ್ಲಿ ಗ್ರಹಣಕ್ಕೆ ಮುನ್ನ ದರ್ಬೆಯನ್ನು ಇರಿಸುವ ಪದ್ಧತಿ ಆಚರಣೆಯಲ್ಲಿದೆ. ಸ್ವತಃ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ದರ್ಬೆಯನ್ನು ಧ್ಯಾನಾಸನಗಳ ಭಾಗ ಎಂದು ಉಪದೇಶಿಸಿದ್ದಾನೆ. ದರ್ಬೆಯು ಇಂದ್ರನ ವಜ್ರಾಯುಧವಿದ್ದಂತೆ. ದರ್ಬೆಯನ್ನು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೇ ಭೂ ಲೋಕಕ್ಕೆ ಭಗವಂತನು ಕಳಿಸಿದ್ದಾನೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಧ್ಯಾನದ ಸಮಯದಲ್ಲಿ ನಮ್ಮ ಶರೀರದಿಂದ ಮುಖ್ಯವಾಗಿ ಕಾಲು ಹಾಗೂ ಕಾಲಿನ ಬೆರಳಿನಿಂದ ಹೊರಹೋಗುವ ಶಕ್ತಿಯನ್ನು ತಡೆಗಟ್ಟುವುದರಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತೆ ಎನ್ನಲಾಗುತ್ತೆ. ಹೋಮ ಹವನಾದಿಗಳಲ್ಲಿ ದರ್ಬೆಯನ್ನು ಹೋಮಕುಂಡದ ಸುತ್ತ 4 ಬದಿಯಲ್ಲೂ ಇರಿಸಲಾಗುತ್ತೆ. ಈ ಕ್ರಮವನ್ನು ಪರಿಸ್ಥರಣ ಎನ್ನುತ್ತಾರೆ. ಅಂದ್ರೆ ಇದು ದೇವರ ಆಸನ ಎಂದರ್ಥ.

ಇನ್ನು ಮನೆಯಲ್ಲಿ ನಾವು ಮಾಡುವ ಯಾವುದೇ ಕಾರ್ಯಕ್ರಮದ ಮೊದಲು ಒಂದು ಆಚರಣೆ ರೂಢಿಯಲ್ಲಿದೆ. ಅದೇನಂದ್ರೆ ದರ್ಬೆಯ ಒಂದು ಗೊಂಚಲನ್ನು ಹಿಡಿದು ಅದರ ತುದಿಯಿಂದ ಎಲ್ಲಾ ಪೂಜಾ ಸಾಮಗ್ರಿಗಳ ಮೇಲೂ, ಪೂಜೆ ಮಾಡುವ ಜಾಗದ ಪ್ರತಿ ಮೂಲೆಗೂ, ಪೂಜೆಗೆ ಕೂರುವವರ ಮೇಲೂ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತೆ. ಹೀಗೆ ಮಾಡೋಕೆ ಒಂದು ಕಾರಣ ಇದೆ. ಅದೇನಂದ್ರೆ ದರ್ಬೆಯ ತುದಿಯಲ್ಲಿ ಧ್ವನಿ ಸಂವೇದನಾ ಕಂಪನಗಳನ್ನುಂಟು ಮಾಡುವ ಶಕ್ತಿ ಇದೆ ಅನ್ನೋ ನಂಬಿಕೆ. ದರ್ಬೆಯಲ್ಲಿರುವ ಕಂಪನಾ ಶಕ್ತಿಯನ್ನು ನೀರು ಹೀರಿಕೊಳ್ಳುತ್ತೆ. ಈ ನೀರು ಎಲ್ಲೆಲ್ಲಿ ಪ್ರೋಕ್ಷಣೆಯಾಗುತ್ತೋ ಅಲ್ಲೆಲ್ಲಾ ಶಕ್ತಿಯ ಸಂಚಲನವಾಗುತ್ತೆ ಎನ್ನಲಾಗುತ್ತೆ.

ಹೀಗಾಗಿ ತುದಿಗಳಿಲ್ಲದ ದರ್ಬೆಯನ್ನು ಉಪಯೋಗಿಸುವಂತಿಲ್ಲ. ಯಾಕಂದ್ರೆ ಅಂತಹ ದರ್ಬೆಯಲ್ಲಿ ಪ್ರವಹನಾ ಶಕ್ತಿ ನಷ್ಟವಾಗಿರುತ್ತೆ. ಇದಿಷ್ಟೇ ಅಲ್ಲದೇ ದರ್ಬೆಯಿಂದ ಮಾಡುವ ಪವಿತ್ರವಾದ ಉಂಗುರವನ್ನು ಪುರುಷನು ತನ್ನ ಬಲಗೈ ಉಂಗುರದ ಬೆರಳಿಗೆ ಧರಿಸುತ್ತಾನೆ. ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದು ಎಳೆಯ ದರ್ಬೆಯನ್ನು, ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಬೆಯನ್ನು, ಅಮಾವಾಸ್ಯೆ ಹಾಗೂ ಶ್ರಾದ್ಧ ಕಾರ್ಯಗಳಲ್ಲಿ 3 ಎಳೆಯ ದರ್ಬೆಯನ್ನು, ದೇವಸ್ಥಾನಗಳಲ್ಲಿ ಮಾಡಲಾಗುವ ಪೂಜೆಗಳಲ್ಲಿ 4 ಎಳೆಯ ದರ್ಬೆಯನ್ನು ಧರಿಸುವ ವಾಡಿಕೆ ಇದೆ. ಹಾಗಾದ್ರೆ ಬನ್ನಿ ದರ್ಬೆಯಿಂದ ತಯಾರಿಸೋ ಉಂಗುರದ ಮಹತ್ವವೇನು ಅನ್ನೋದನ್ನು ಇಲ್ಲಿ ತಿಳಿಯಿರಿ.

ದರ್ಬೆ ಉಂಗುರದ ಮಹತ್ವ
-ಯಾವುದೇ ಪೂಜೆ, ಯಜ್ಞ, ಹೋಮ, ಹವನಗಳಲ್ಲಿ ದರ್ಬೆಯ ಪವಿತ್ರವಾದ ಉಂಗುರ ಧರಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸುಂದರ ಪುರಾತನ ಸಂಪ್ರದಾಯ.
-ಬ್ರಾಹ್ಮಣರು ಮತ್ತು ಶ್ರೀವೈಷ್ಣವರು ಶುಭ ಕಾರ್ಯಗಳು ಅಥವಾ ಅಶುಭ ಕಾರ್ಯಕ್ರಮಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ದರ್ಬೆ ಹುಲ್ಲಿನ ಉಂಗುರವನ್ನು ಕೈ ಬೆರಳಿಗೆ ಹಾಕುತ್ತಾರೆ.
-ನಾವು ಯಾವುದೇ ವ್ರತ, ಯಜ್ಞ-ಯಾಗಾದಿಗಳು, ಪೂಜೆಯನ್ನು ಮಾಡುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟಶಕ್ತಿಗಳು ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಬೆಯ ದರ್ಶನ ಮಾತ್ರದಿಂದ ದುಷ್ಟ ಶಕ್ತಿಗಳು ಅಲ್ಲಿಂದ ಓಡಿ ಹೋಗುತ್ತವೆ ಎಂಬ ನಂಬಿಕೆ ಇದೆ.

ದರ್ಬೆ ಮೇಲ್ನೋಟಕ್ಕೆ ವ್ಯರ್ಥವಾಗಿ ಬೆಳೆಯುವ ಹುಲ್ಲು. ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ. ಹಾಗೂ ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು ಇಡುತ್ತಾರೆ.

Leave A Reply

Your email address will not be published.